ಬೆಂಗಳೂರು; ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯ ಗ್ರಂಥಾಲಯಗಳಿಗೆ ಭಾರತೀಯ ಭಾಷೆಗಳ ಪುಸ್ತಕಗಳ ಖರೀದಿಗೆ ಸೀಮಿತವಾದಂತೆ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಅದೇ ರೀತಿ ಪುಸ್ತಕಗಳ ಆಯ್ಕೆ ಸಮಿತಿಗೆ ಆಯವ್ಯಯದ ಮಾಹಿತಿಯನ್ನೂ ಒದಗಿಸಿರಲಿಲ್ಲ ಎಂಬುದನ್ನು ತನಿಖಾ ಸಮಿತಿಯು ಬಹಿರಂಗಗೊಳಿಸಿದೆ.
ಪುಸ್ತಕಗಳ ಖರೀದಿ, ಡಿಜಿಟಲ್ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮ, ಇ-ಕಂಟೆಂಟ್ಗಳ ಹಿಂದಿನ ವ್ಯವಹಾರಗಳನ್ನು ಹೊರಗೆಳೆದಿದ್ದ ತನಿಖಾ ಸಮಿತಿಯು ಇದೀಗ ಪುಸ್ತಕಗಳ ಆಯ್ಕೆ ಪ್ರಕ್ರಿಯೆಗಳಲ್ಲಾಗಿರುವ ಹಲವು ಲೋಪಗಳನ್ನು ಮುನ್ನೆಲೆಗೆ ತಂದಿದೆ.
ಪುಸ್ತಕ ಆಯ್ಕೆ ಕಾರ್ಯವಿಧಾನದ ಅನುಸಾರ 2018-19ನೇ ಸಾಲಿನಲ್ಲಿ 650 ಲಕ್ಷ ರು ನಿಗದಿಯಾಗಿತ್ತು. ಈ ಪೈಕಿ 520 ಲಕ್ಷ ರುಗ.ಳನ್ನು ಕನ್ನಡ ಪುಸ್ತಕಗಳ ಖರೀದಿ ಹಾಗೂ 130.00 ಲಕ್ಷ ರು ಗಳನ್ನು ಆಂಗ್ಲ ಭಾಷೆ ಒಳಗೊಂಡಂತೆ ಇನ್ನಿತರೆ ಭಾರತೀಯ ಭಾಷೆಗಳ ಪುಸ್ತಕ ಖರೀದಿಗೆ ಸೀಮಿತವಾದಂತೆ ಪುಸ್ತಕಗಳನ್ನು ಆಯ್ಕೆ ಮಾಡಬೇಕಿತ್ತು.
ಈ ಕುರಿತು ಪುಸ್ತಕ ಆಯ್ಕೆ ಸಮಿತಿಯ ಗಮನಕ್ಕೆ ತಂದು 650.00 ಲಕ್ಷ ರು.ಗಳ ಮಿತಿಗೊಳಪಟ್ಟು ಪುಸ್ತಕಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ಕೋರಬೇಕಾಗಿತ್ತು. ಆದರೇ 2018-19ನೇ ಸಾಲಿಗೆ ನಿಗದಿಯಾದ ಆಯವ್ಯಯದ ಮಾಹಿತಿಯನ್ನು ಸಮಿತಿಗೆ ಒದಗಿಸಿದ ಬಗ್ಗೆ ಯಾವುದೇ ಅಂಶಗಳು ದಾಖಲಾಗಿಲ್ಲ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.
‘ಬದಲಿಗೆ ಆಯ್ಕೆಯಾದ ಪುಸ್ತಕಗಳಿಗೆ ಅವಶ್ಯಕವಾದ ಅನುದಾನ ಬಿಡುಗಡೆಗೆ ಮತ್ತು ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿರುತ್ತದೆ. ಇದರಿಂದಾಗಿ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ದೇಶಕರು ಆಯ್ಕೆ ಸಮಿತಿಗೆ ಅಗತ್ಯ ಮಾಹಿತಿಗಳನ್ನು ನೀಡದೆಯೇ ಸರ್ಕಾರಿ ಮಾರ್ಗಸೂಚಿಗಳಿಗೆ ವ್ಯತಿರಿಕ್ತವಾಗಿ 20.57 ಕೋಟಿ ರು. ಮೊತ್ತದ ಪುಸ್ತಕಗಳನ್ನು ಆಯ್ಕೆ ಮಾಡಿಸಿಕೊಂಡು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿತ್ತು,’ ಎಂದು ತನಿಖಾ ಸಮಿತಿಯು ವರದಿಯಲ್ಲಿ ಅಭಿಪ್ರಾಯಿಸಿದೆ.
ನಿರ್ದೇಶಕರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿ ಪ್ರಕ್ರಿಯೆ ನಿರ್ವಹಿಸಿದ್ದಾರೆ. ಆದರೆ ಈ ಯಾವ ಮಾಹಿತಿಯನ್ನೂ ಸರ್ಕಾರದ ಗಮನಕ್ಕೆ ತಂದಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.
2019ನೇ ಸಾಲಿನಲ್ಲಿ ಮುದ್ರಣಗೊಂಡ ಪುಸ್ತಕಗಳನ್ನು ಆಯ್ಕೆ ಮಾಡಲು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯು ವಿವಿಧ ದಿನಾಂಕಗಳಲ್ಲಿ ಸಭೆ ಸೇರಿತ್ತು. ಆದರೆ ಆಯಾ ದಿನ ಸಭೇಯ ತೀರ್ಮಾನ, ನಡವಳಿ ಪ್ರತಿಯನ್ನು ಸಲ್ಲಿಸಿಲ್ಲ.

ಆಯ್ಕೆ ಸಮಿತಿಗೆ ನಿರ್ದೇಶಕರೇ ಸದಸ್ಯ ಕಾರ್ಯದರ್ಶಿಯಾಗಿದ್ದು ಸಭೇ ನಡವಳಿಯನ್ನು ಸಿದ್ದಪಡಿಸಿ ಅಧ್ಯಕ್ಷರ ಸಹಿ ಪಡೆಯುವುದು ಸದಸ್ಯ ಕಾರ್ಯದರ್ಶಿಯಾಗಿರುವ ನಿರ್ದೇಶಕರ ಜವಾಬ್ದಾರಿ. ಆದರೆ ನಿರ್ದೇಶಕರು ಸಭೆಯ ನಡವಳಿಯನ್ನು ಸಿದ್ಧಪಡಿಸದೇ ಸಮಿತಿ ಸದಸ್ಯರಿಗೆ ಸಭಾ ಭತ್ಯೆ ಹಾಗೂ ಪ್ರಯಾಣ ಭತ್ಯೆ ಪಾವತಿಸುವ ಮೂಲಕ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪುಸ್ತಕಗಳ ಸರಬರಾಜಿಗೆ ಹಕ್ಕನ್ನು ಪಡೆದ ನೋಂದಾಯಿತ ಹಾಗೂ ಹಕ್ಕು ಸ್ವಾಮ್ಯತೆ ಹೊಂದಿದ ಲೇಖಕ/ಪ್ರಕಾಶಕ, ಪ್ರಕಾಶಕ/ಪುಸ್ತಕ ಸರಬರಾಜುದಾರರು ಒಮ್ಮೆ ತಮ್ಮ ಹಕ್ಕನ್ನು ಚಲಾಯಿಸಿ 1.00/2.50 ಲಕ್ಷ ಮೌಲ್ಯದ ಪುಸ್ತಕಗಳನ್ನು ಸರಬರಾಜು ಮಾಡಿದ ನಂತರದಲ್ಲಿ ಅವರಲ್ಲಿ ಇಲ್ಲದೇ ಇರುವ ಹಕ್ಕನ್ನು ಶೀರ್ಷಿಕೆವಾರು ಬೇರೆ ಬೇರೆಯವರಿಗೆ ಹಂಚಿಕೆ ಮಾಡಲು ಅವಕಾಶ ಕಲ್ಪಿಸಿರುವುದಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.
ಡಿಜಿಟಲ್ ಗ್ರಂಥಾಲಯ ಯೋಜನೆಯಲ್ಲಿ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಸತೀಶ್ಕುಮಾರ್ ಹೊಸಮನಿ ಅವರು ಭರ್ಜರಿ ಪ್ರಚಾರ ತೆಗೆದುಕೊಂಡಿದ್ದರ ಬೆನ್ನಲ್ಲೇ ಇದೀಗ ಉಚಿತವಾಗಿ ಲಭ್ಯವಿದ್ದ ಇ-ಕಂಟೆಂಟ್ಗಳನನೂ ಪೇಯ್ಡ್ ಕಂಟೆಂಟ್ ಎಂದು ಬಿಂಬಿಸಲಾಗಿತ್ತು ಎಂಬ ಸಂಗತಿಯು ಬಹಿರಂಗವಾಗಿತ್ತು.
https://stack.thefile.in/2024/03/governance/22853/
ಪುಸ್ತಕಗಳ ಖರೀದಿ, ಡಿಜಿಟಲ್ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮಗಳನ್ನು ಹೊರತೆಗೆದಿರುವ ತನಿಖಾ ಸಮಿತಿಯು ಇದೀಗ ಇ-ಕಂಟೆಂಟ್ಗಳ ಹಿಂದಿನ ಮುಖವಾಡವನ್ನೂ ತೆರೆದಿಟ್ಟಿತ್ತು.
https://stack.thefile.in/2024/03/governance/22851/
ಈ ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿರುವ ಸಮಿತಿಯು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಹೊಸಮನಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದೆ.
https://stack.thefile.in/2024/03/governance/22849/
ತನಿಖಾ ಸಮಿತಿಯು ನೀಡಿದ್ದ ವರದಿಯನ್ನಾಧರಿಸಿ ಸರ್ಕಾರವು 2024ರ ಮಾರ್ಚ್ 11ರಂದು ಸತೀಶ್ ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿತ್ತು.
https://stack.thefile.in/2024/03/governance/22839/
ಪುಸ್ತಕ ಖರೀದಿ, ಡಿಜಿಟಲ್ ಗ್ರಂಥಾಲಯ ಯೋಜನೆ ಅನುಷ್ಠಾನ, ಇ-ಕಂಟೆಂಟ್ ಅಭಿವೃದ್ಧಿ, ಪುಸ್ತಕಗಳ ಸಾಗಾಣಿಕೆ, ಟೆಂಡರ್ ಅಕ್ರಮ, ನಿಯಮಗಳ ಉಲ್ಲಂಘನೆ, ಯೋಜನೆ ಅನುಷ್ಠಾನಗೂ ಮುನ್ನವೇ ಸರಬರಾಜುದಾರರು ಮತ್ತು ಸೇವಾದಾರರಿಗೂ ಮುಂಗಡವಾಗಿ ಹಣ ಪಾವತಿ, ಹಣ ದುರುಪಯೋಗ, ಅಧಿಕಾರ ದುರುಪಯೋಗವನ್ನು ಪತ್ತೆ ಹಚ್ಚಿತ್ತು.
ಸತೀಶ್ ಕುಮಾರ್ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೊದಲು ಪತ್ರ ಬರೆದಿದ್ದ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಆ ನಂತರ ನಡೆದ ಬೆಳವಣಿಗೆಯಲ್ಲಿ ವಿಚಾರಣೆ ಕೈಬಿಡಬೇಕು ಎಂದು ಬರೆದಿದ್ದ ಪತ್ರ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದರು. ಆದರೂ ತನಿಖಾ ಸಮಿತಿಯು ವಿಚಾರಣೆ ನಡೆಸಿತ್ತು.
https://stack.thefile.in/2024/02/governance/22099/
ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ ವಿಶ್ವನಾಥ್ ಪತ್ರ ಬರೆದಿದ್ದರು. ಆದರೀಗ ತನಿಖೆಯನ್ನೇ ಕೈಬಿಡಬೇಕು ಮತ್ತು ಅದೇ ಹುದ್ದೆಯಲ್ಲಿಯೇ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗೆ 2024ರ ಜನವರಿ 10ರಂದು ಪತ್ರ ಬರೆದಿದ್ದರು. ವಿಶ್ವನಾಥ್ ಅವರ ಈ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು.
https://stack.thefile.in/2024/01/governance/21778/
ಗ್ರಂಥಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು.
https://stack.thefile.in/2023/11/governance/19918/
ಇದರ ಬೆನ್ನಲ್ಲೇ ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್, ಯುಪಿಎಸ್, ಝೆರಾಕ್ಸ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದಿತ್ತು.
https://stack.thefile.in/2023/11/governance/19974/
ವಿಶೇಷವೆಂದರೆ ಈ ಹಗರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದ ಬಹುತೇಕ ಅಧಿಕಾರಿಗಳು ನಿವೃತ್ತಿಯಾಗಿದ್ದರು.
https://stack.thefile.in/2023/11/governance/20028/
ಕಂಪ್ಯೂಟರ್ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಕುರಿತು ಕೆಲ ಅಧಿಕಾರಿಗಳಿಗೆ ಆರೋಪ ಪಟ್ಟಿಯೂ ಜಾರಿಯಾಗಿತ್ತು.
https://stack.thefile.in/2024/01/governance/21493/
ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಡಿಸಿಎಂಗಳ ಹೆಸರಿನಲ್ಲಿ 5 ಕೋಟಿ ಸಂಗ್ರಹಿಸಲು ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
https://stack.thefile.in/2021/02/governance/6525/
'ಹಲವು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಹೊಸಮನಿ ಅವರ ವಿರುದ್ಧ ತನಿಖೆ ನಡೆಯುತ್ತಿದೆಯಾದರೂ ನಿರ್ದೇಶಕರ ಹುದ್ದೆಯಲ್ಲಿಯೇ ಸರ್ಕಾರವು ಮುಂದುವರೆಸಿರುವುದು ಸರಿಯಲ್ಲ. ಆರೋಪಿತ ವ್ಯಕ್ತಿಯು ಅದೇ ಹುದ್ದೆಯಲ್ಲಿ ಮುಂದುವರೆದರೆ ದಾಖಲೆ, ಸಾಕ್ಷ್ಯ ನಾಶವಾಗಲಿದೆ. ಕನಿಷ್ಠ ವಿಚಾರಣೆ ಪೂರ್ಣಗೊಳ್ಳುವವರೆಗಾದರೂ ನಿರ್ದೇಶಕರನ್ನು ರಜೆ ಮೇಲೆ ತೆರಳಲು ನಿರ್ದೇಶಿಸಬೇಕಿತ್ತು, 'ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು.






