ಬೆಂಗಳೂರು; ಸಾರ್ವಜನಿಕ ಹಿತಾಸಕ್ತಿಯಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಯ ಉದ್ದೇಶಕ್ಕಾಗಿ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಸುವ ಮತ್ತು ನಿಯಂತ್ರಿಸುವ ಅಧಿಕಾರ ಹೊಂದುವ ಉದ್ದೇಶದಿಂದ ಹೊರಡಿಸಿರುವ ಸುಗ್ರೀವಾಜ್ಞೆಯು ಇದೀಗ ಹೊರಬಿದ್ದಿದೆ.
ಅರಮನೆ ಮೈದಾನದ ರಸ್ತೆ ಅಗಲೀಕರಣ ಉದ್ದೇಶಕ್ಕೆ ಟಿಡಿಆರ್ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಜಾರಿಗೊಳಿಸಿದಲ್ಲಿ ಬೊಕ್ಕಸಕ್ಕೆ ಸಂಭಾವ್ಯ 3,011.66 ಕೋಟಿ ಆರ್ಥಿಕ ಹೊರೆಯಿಂದ ಪಾರಾಗಲು ರಾಜ್ಯ ಕಾಂಗ್ರೆಸ್ ಸರ್ಕಾರವು ಸುಗ್ರೀವಾಜ್ಞೆ ಮೊರೆ ಹೊಕ್ಕಿದೆ. ಅಲ್ಲದೇ ಇದನ್ನು ‘ಸದ್ಭಾವನೆ’ಯಿಂದ ಕೈಗೊಂಡ ಕ್ರಮವಾಗಿದೆ ಎಂದೂ ಬಣ್ಣಿಸಿದೆ. ಮೇಲ್ನೋಟಕ್ಕೆ ಸದ್ಭಾವನೆ ಎಂದು ಹೇಳಿದರೂ ಸಹ ರಾಜಮನೆತನಕ್ಕೆ ಸೆಡ್ಡು ಹೊಡೆದಂತಿದೆ.
ಬೆಂಗಳೂರು ಅರಮನೆ ( ಭೂ ಬಳಕೆ ಮತ್ತು ನಿಯಂತ್ರಣ) ಹೆಸರಿನಲ್ಲಿರುವ ಈ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳಿಸಿದೆ. ಈ ಸುಗ್ರೀವಾಜ್ಞೆಯ ಪೂರ್ಣ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಅಲ್ಲದೇ ಬೆಂಗಳೂರು ಅರಮನೆ ಮೈದಾನದ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ವರ್ಗದ ವಿರುದ್ಧ ಯಾರೂ ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿಲ್ಲ. ಈ ಮೂಲಕ ಅಧಿಕಾರಿ ವರ್ಗಕ್ಕೆ ಸುಗ್ರೀವಾಜ್ಞೆ ಮೂಲಕ ರಕ್ಷಣೆಯನ್ನೂ ಒದಗಿಸಿದೆ.
ಟಿಡಿಆರ್ ವಿಚಾರದಲ್ಲಿ ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶ ಅಥವಾ ರಾಜ್ಯ ಸರ್ಕಾರವು ಈ ಮೊದಲು ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ ರಾಜ್ಯ ಸರ್ಕಾರವು (1)ನೇ ಉಪ ಪ್ರಕರಣದಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಮುಂದುವರೆಯದಿರಲು ಅಧಿಕಾರ ಹೊಂದಿದೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಒಂದೊಮ್ಮೆ ರಾಜ್ಯ ಸರ್ಕಾರವು (2)ನೇ ಉಪ ಪ್ರಕರಣದಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಗೆ ಮುಂದುವರೆಯದಿರಲು ತೀರ್ಮಾನಿಸಿದಲ್ಲಿ ಉಪ ಪ್ರಕರಣ (1) ರಡಿ ಬಳಸಲು ಉದ್ದೇಶಿಸಿರುವ ಆದರೆ ತರುವಾಯ ಉಪ ಪ್ರಕರಣ (2)ರಡಿ ಮುಂದುವರೆಯದಿರುವ ಅಥವಾ ಬಳಸದಿರುವ ಬೆಂಗಳೂರು ಅರಮನೆಯ ಭಾಗಾಂಶ ಭಾಗವನ್ನು ಪೂರ್ವ ಸ್ಥಿತಿಗೆ ತರತಕ್ಕದ್ದು ಮತ್ತು ಈ ಒಟ್ಟಾರೆ ವೆಚ್ಚವನ್ನೂ ಭರಿಸಲಿದೆ ಎಂದು ಉಲ್ಲೇಖಿಸಿರುವುದು ತಿಳಿದು ಬಂದಿದೆ.

ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಬೆಂಗಳೂರು ಅರಮನೆಯ ಭಾಗಾಂಶದ ಯಾವುದೇ ಭಾಗವನ್ನು ರಾಜ್ಯ ಸರ್ಕಾರವು ಬಳಸಿದ್ದರೂ ಸಹ 4ನೇ ಪ್ರಕರಣದಡಿಯಲ್ಲಿ ಈ ಸುಗ್ರೀವಾಜ್ಞೆ ಪ್ರಕಾರ ರಾಜ್ಯ ಸರ್ಕಾರವು ಕ್ಲೇಮ್ದಾರರಿಗೆ ನಷ್ಟ ಪರಿಹಾರ ಪಾವತಿಸಲಿದೆ ಎಂದೂ ಹೇಳಿದೆ.
ಇದೇ ಸುಗ್ರೀವಾಜ್ಞೆಯಲ್ಲಿ ಬಳಕೆಗಾಗಿ ಸಂದಾಯ ಮಾಡಬಹುದಾದ ನಷ್ಟ ಪರಿಹಾರವನ್ನೂ ಪ್ರಸ್ತಾವಿಸಿದೆ. ಈ ಅಧ್ಯಾದೇಶಕ್ಕೆ ವಿರುದ್ಧವಾಗಿರುವ, ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಯಾವುದೇ ಆದೇಶ, ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಸಹ ನಷ್ಟ ಪರಿಹಾರದ ಉದ್ದೇಶಕ್ಕಾಗಿ ಭೂಮಿಯ ಮಾರ್ಗಸೂಚಿ ಮೌಲ್ಯವು ಈ ಸುಗ್ರೀವಾಜ್ಞೆಯ ಅನುಸಾರವೇ ಇರಲಿದೆ ಎಂದು ವಿವರಿಸಿದೆ.

ಮಾರ್ಗಸೂಚಿ ಮೌಲ್ಯವನ್ನು ಹೇಗೆ ಪರಿಗಣಿಸಬೇಕು ಎಂದೂ ಸುಗ್ರೀವಾಜ್ಞೆಯಲ್ಲಿ ಹೇಳಿದೆ. ಈ ಸುಗ್ರೀವಾಜ್ಞೆಯ 3ನೇ ಪ್ರಕರಣದ (1)ನೇ ಉಪ ಪ್ರಕರಣದಡಿಯ ಬಳಸಲಾದ ಬೆಂಗಳೂರು ಅರಮನೆಯ ಯಾವುದೇ ಭಾಗಕ್ಕಾಗಿನ ನಷ್ಟ ಪರಿಹಾರದ ಲೆಕ್ಕಾಚಾರವನ್ನೂ ಅಂದಾಜಿಸಿದೆ. ಈ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 8ನೇ ಪ್ರಕರಣ ಮತ್ತು 9ನೇ ಪ್ರಕರಣದ ಅನುಸಾರವಾಗಿ ಪ್ರಮಾಣಾನುಸಾರ ಮೌಲ್ಯವಾಗಿರಲಿದೆ. ಅದನ್ನು ಕರ್ನಾಟಕ ಸ್ಟಾಂಪು ಅದಿನಿಯಮ 1957ರ 45 ಬಿ ಪ್ರಕರಣದಡಿ ಮಾರ್ಗಸೂಚಿ ಮೌಲ್ಯವೆಂದು ಪರಿಗಣಸಲಿದೆ ಎಂದು ಉಲ್ಲೇಖಿಸಿದೆ.

ಅದೇ ರೀತಿ ಕ್ಲೇಮುದಾರನಿಗೆ ನಷ್ಟ ಪರಿಹಾರವನ್ನು ಹೇಗೆ ಸಂದಾಯ ಮಾಡಬೇಕು ಎಂಬ ಬಗ್ಗೆ ವಿವರಿಸಿದೆ. ಭೂ ವ್ಯಾಪ್ತಿಯ ಪ್ರಮಾಣಾನುಸಾರ ಮೌಲ್ಯದ ಮೊತ್ತ ಅಥವಾ ಸಂದರ್ಭ ಅನುಸಾರ, ಪ್ರಮಾಣಾನುಸಾರ ಮೌಲ್ಯದ ಮೇಲೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು, ಯಾವುದೇ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪು ಏನೇ ಇದ್ದರೂ ಈ ಸುಗ್ರಿವಾಜ್ಞೆ ಮೂಲಕ ನಿಯಮಿಸಿರುವುದಕ್ಕೆ ಹೊರತಾಗಿ ಕ್ಲೇಮುದಾರರು ಯಾವುದೇ ನಷ್ಟ ಪರಿಹಾರದ ಹಕ್ಕನ್ನು ಹೊಂದಿರುವುದಿಲ್ಲ ಎಂದು ವಿವರಿಸಿದೆ.
ಹಾಗೆಯೇ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ )ಅಧಿನಿಯಮದ 1996ರ 8ನೇ ಪ್ರಕರಣ ಮತ್ತು 9ನೇ ಉಪಪ್ರಕರಣದಡಿ ಅಸಂಗತವಾದ ನಷ್ಟ ಪರಿಹಾರದ ಸಂದಭ್ದಲ್ಲಿ ಕ್ಲೇಮುದಾರರು (3)ನೇ ಉಪ ಪ್ರಕರಣದಡಿ ಯಾವುದೇ ಅಂಥ ನಷ್ಟ ಪರಿಹಾರದ ಬಳಕೆಗಾಗಿ ನಷ್ಟ ಭರ್ತಿಗಾಗಿ ಸರ್ಕಾರಕ್ಕೆ ಹೊಣೆಗಾರರಾಗಿರುತ್ತಾರೆ ಎಂದು ಹೇಳಿದೆ.
ಒಂದೊಮ್ಮೆ ಕ್ಲೇಮುದಾರರ ನಡುವೆ ವಿವಾದಗಳು ಉದ್ಭವಿಸಿದ ಸಂದರ್ಭದಲ್ಲಿ ನಷ್ಟ ಪರಿಹಾರದ ಸಂದಾಯದ ಬಗ್ಗೆಯೂ ಸುದೀರ್ಘವಾಗಿ ವಿವರಿಸಿದೆ. ನಷ್ಟ ಪರಿಹಾರವನ್ನು ಕ್ಲೇಮು ಮಾಡುವ ಉದ್ದೇಶಕ್ಕಾಗಿ ಕ್ಲೇಮುದಾರರ ನಡುವೆ ಯಾವುದೇ ವಿವಾದಗಳಾದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಸುಗ್ರೀವಾಜ್ಞೆ ಅಡಿ ನಿರ್ಧರಿಸಬಹುದಾದ ನಷ್ಟ ಪರಿಹಾರವನ್ನು ಕಮಿಷನರ್ ಮುಂದೆ ಠೇವಣಿ ಇರಿಸಬೇಕಿದೆ.
ಹಾಗೆಯೇ ಸಕ್ಷಮ ಸಿವಿಲ್ ನ್ಯಾಯಾಲಯದ ಅಂತಿಮ ಡಿಕ್ರಿಯ ದೃಢೀಕೃತ ಪ್ರತಿಯನ್ನು ಕಮಿಷನರ್ಗೆ ಒದಗಿಸದೇ ಕ್ಲೇಮುದಾರರು ನಡುವೆಯೇ ತಮ್ಮೊಳಗೆ ವಿವಾದಗಳು ಉದ್ಭವವಾದಲ್ಲಿ ಯಾರೇ ಕ್ಲೇಮುದಾರನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ 13ನೇ ಪ್ರಕರಣದಡಿ ಕಮಿಷನರ್ನಿಂದ ಯಾವುದೇ ನಷ್ಟ ಪರಿಹಾರವನ್ನು ಹಿಂಪಡೆಯಲು ಹಕ್ಕನ್ನು ಹೊಂದಿರುವುದಿಲ್ಲ.
ಅಂತಿಮ ಡಿಕ್ರಿಯು ಯಾರ ಪರವಾಗಿದೆಯೋ ಅಂಥ ಕ್ಲೇಮುದಾರನಿಗೆ ನಷ್ಟ ಪರಿಹಾರವನ್ನು ಬಿಡುಗಡೆಗೊಳಿಸುವ ಮೊದಲು ಹಿತಾಸಕ್ತಿಯುಳ್ಳ ಯಾರೇ ವ್ಯಕ್ತಿಯ ಮೌಖಿಕ ವಿಚಾರಣೆಗೆ ಅವಕಾಶ ನೀಡಲಿದೆ. ಮತ್ತು ಅಂತಿಮ ಡಿಕ್ರಿಯ ಮೇಲೆ ಯಾವುದೆ ನ್ಯಾಯಾಲಯವು ತಡೆಯಾಜ್ಞೆ ನೀಡಿಸದಲ್ಲಿ ಯಾರೇ ಕ್ಲೇಮುದಾರನಿಗೆ ನಷ್ಟ ಪರಿಹಾರವನ್ನು ಬಿಡುಗಡೆಗೊಳಿಸಲಾಗುವುದಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.

ಅಲ್ಲದೇ ಸದ್ಭಾವನೆಯಿಂದ ಕೈಗೊಂಡ ಕ್ರಮಕ್ಕೂ ಸುಗ್ರೀವಾಜ್ಞೆಯು ರಕ್ಷಣೆಯನ್ನು ಒದಗಿಸಿದೆ. 'ಈ ಅಧ್ಯಾದೇಶದ ಅನುಸರಣೆಯಲ್ಲಿ ಸದ್ಭಾವನೆಯಿಂದ ಏನನ್ನಾದರೂ ಮಾಡಿರುವ ಅಥವಾ ಮಾಡಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಯಾರೇ ಅಧಿಕಾರಿ ಅಥವಾ ಅಂಗ ಮಾಧ್ಯಮಗಳ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವ್ಯವಹರಣೆಗಳನ್ನು ಹೂಡತಕ್ಕದ್ದಲ್ಲ. ಮತ್ತು ರಾಜ್ಯ ಸರ್ಕಾರದ ಯಾರೇ ಅಧಿಕಾರಿ ಅಥವಾ ಅದರ ಅಂಗ ಮಾಧ್ಯಮಗಳ ಯಾವುದೇ ಶಿಕ್ಷೆಗೂ ಹೊಣೆಯಾಗತಕ್ಕದ್ದಲ್ಲ ,' ಎಂದು ಹೇಳಿದೆ.
ರಾಜಮನೆತನಕ್ಕೆ ಟಿಡಿಆರ್ ನೀಡಲು ಅಧಿಕಾರವಿಲ್ಲದಿದ್ದರೂ ಸಹ ದುಸ್ಸಾಹಸಕ್ಕೆ ಕೈ ಹಾಕಿದ್ದ ಬಿಬಿಎಂಪಿಯ ಹಿಂದಿನ ಆಯುಕ್ತ ಭರತ್ ಲಾಲ್ ಮೀನಾ ಅವರು ಸರ್ಕಾರದ ಅನುಮತಿಯನ್ನೇ ಪಡೆದಿರಲಿಲ್ಲ.
https://stack.thefile.in/2025/01/governance/28525/
ಆದರೂ ಭರತ್ ಲಾಲ್ ಮೀನಾ ಅವರು 2009ರ ಡಿಸೆಂಬರ್ 26ರಂದು ಸ್ವಯಂ ಪ್ರೇರಿತವಾಗಿ ಬರೆದಿದ್ದ ಪತ್ರವೇ ಮೈಸೂರು ರಾಜ ಮನೆತನಕ್ಕೆ ಟಿಡಿಆರ್ ರೂಪದಲ್ಲಿ 3,011.66 ಕೋಟಿ ರು ನೀಡುವ ಪರಿಸ್ಥಿತಿಯನ್ನು ತಂದೊಡ್ಡಲು ಮೂಲ ಕಾರಣವಾಗಿತ್ತು.
https://stack.thefile.in/2024/12/governance/28446/
ಜಯಮಹಲ್ ಮತ್ತು ಬಳ್ಳಾರಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಅರಮನೆ ಮೈದಾನದ ಆಸ್ತಿಯ ಭಾಗಶಃ ಜಾಗವನ್ನು ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರು ಅಸಮ್ಮತಿ ವ್ಯಕ್ತಪಡಿಸಿದ್ದರು.
https://stack.thefile.in/2024/12/rti/28459/#google_vignette
ಅಲ್ಲದೇ ಬಿಬಿಎಂಪಿಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತಿರಸ್ಕೃತಗೊಂಡಿತ್ತು.
https://stack.thefile.in/2024/12/rti/28483/
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿಯೇ ಬಿಬಿಎಂಪಿಯ ಹಳೆಯ ಪ್ರಸ್ತಾವನೆ ಮತ್ತು
https://stack.thefile.in/2024/12/governance/28506/
ಮತ್ತು ಭರತ್ ಲಾಲ್ ಮೀನಾ ಅವರು ಬರೆದಿದ್ದ ಪತ್ರವನ್ನೂ ಹಿಂಪಡೆದುಕೊಂಡಿದ್ದನ್ನು ಸ್ಮರಿಸಬಹುದು.






