the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

2,560 ಎಕರೆ ಒತ್ತೆ!; ಸ್ಪಷ್ಟ ಅಭಿಪ್ರಾಯವಿಲ್ಲ, ವಿಶ್ಲೇಷಣೆಯೂ ಇಲ್ಲ, ತರಾತುರಿ ತೀರ್ಮಾನ ಕೈಗೊಂಡಿತೇ?

thefilestack by thefilestack
April 27, 2025
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯ ಭಾಗವಾಗಿರುವ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೇವಲ 7,000 ಕೋಟಿ ರು.ಗಳಷ್ಟು  ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಏದುಸಿರು ಬಿಟ್ಟಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು  2,560 ಎಕರೆಯನ್ನು ಒತ್ತೆ ಇರಿಸಲು ಅನುಮತಿ ನೀಡಿದ್ದ ಸಂಗತಿಯು ಇದೀಗ ಮುನ್ನಲೆಗೆ ಬಂದಿದೆ.

 

ಈ ಯೋಜನೆಗಾಗಿ  ಹುಡ್ಕೋ ಸಂಸ್ಥೆಯು ಸಾಲ ನೀಡಲು ಸಮ್ಮತಿಸಿದೆ.  ಈ ಸಂಬಂಧ ಭೂ ಸ್ವಾಧೀನಕ್ಕೆ ಮುಂದಾಗಿರುವ ಬಿಡಿಎ ನೋಟೀಸ್‌ ನೀಡಿರುವ ಬೆನ್ನಲ್ಲೇ ಬಿಡಿಎ ಪ್ರಸ್ತಾವನೆ ಮತ್ತು ಆರ್ಥಿಕ ಇಲಾಖೆಯ ಅಭಿಪ್ರಾಯವೂ ಮುನ್ನೆಲೆಗೆ ಬಂದಿದೆ.

 

ಈ ಯೋಜನೆ ಸಂಬಂಧ ಅವಲೋಕಿಸಿದ್ದ ಆರ್ಥಿಕ ಇಲಾಖೆಯು 2024ರ ಸೆ.3ರಂದು ಬರೆದಿದ್ದ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2024ರ ಆಗಸ್ಟ್‌ 16ರಂದು ಬಿಡಿಎ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಡಳಿತ ಇಲಾಖೆಯಾದ ನಗರಾಭಿವೃದ್ದಿ ಇಲಾಖೆಯು  ಯಾವುದೇ ಅಭಿಪ್ರಾಯ ನೀಡದೇ  ಅಥವಾ ವಿಶ್ಲೇಷಣೆ ಮಾಡಿರಲಿಲ್ಲ. ಬದಲಿಗೆ ಬಿಡಿಎ  ಆಯುಕ್ತರು ಸಲ್ಲಿಸಿದ್ದ  ಪ್ರಸ್ತಾವನೆಯನ್ನು ನೇರವಾಗಿ ಸಚಿವ ಸಂಪುಟಕ್ಕೆ ಸಲ್ಲಿಸಿತ್ತು.

 

ಈ ಯೋಜನೆಯ ಸಾಧಕ ಬಾಧಕಗಳ ಕುರಿತು ವಿಸ್ತೃತವಾಗಿ ಚರ್ಚೆಯನ್ನೇ ನಡೆಸದೇ ತರಾತುರಿಯಲ್ಲಿ 2,560 ಎಕರೆಯನ್ನು ಒತ್ತೆ ಇರಿಸಲು ಅನುಮತಿ ನೀಡಿದೆ. ವಿಶೇಷವೆಂದರೇ ಈ ಸಂಬಂಧ 2024ರ ಸೆ.3ರಂದು ಆರ್ಥಿಕ ಇಲಾಖೆಯು ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ಹಿಂದಕ್ಕೆ ಕಳಿಸಿತ್ತು. ಮೂರೇ ಮೂರು ದಿನದಲ್ಲಿ ಇದೇ ಯೋಜನೆಗೆ ಸಚಿವ ಸಂಪುಟವು ಅನುಮತಿ ನೀಡಿದೆ.

 

ಪತ್ರದಲ್ಲೇನಿದೆ?

 

ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಇದು 27,000 ಕೋಟಿ ವೆಚ್ಚದ ಯೋಜನೆಗೆ ಪ್ರಸ್ತಾವನೆಯಾಗಿದೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಅಗತ್ಯವಾಗಿತ್ತು. ಈ ಫೈಲ್‌ಗೆ ಯಾವುದೇ ಡಿಸಿಎನ್‌  ಲಗತ್ತಿಸಲಾಗಿಲ್ಲ. ಇದಲ್ಲದೆ, ಆಡಳಿತ ಇಲಾಖೆಯು ಯಾವುದೇ ಅಭಿಪ್ರಾಯ ಅಥವಾ ವಿಶ್ಲೇಷಣೆಯಿಲ್ಲದೆ ಆಯುಕ್ತರ ಪ್ರಸ್ತಾವನೆಯನ್ನು ಕಳುಹಿಸಿದೆ.

 

ಆದ್ದರಿಂದ ಈ ಕೆಳಗಿನ ಅವಲೋಕನಗಳೊಂದಿಗೆ ಕಡತವನ್ನು ಆಡಳಿತ ಇಲಾಖೆಗೆ ಹಿಂತಿರುಗಿಸಲಾಗಿದೆ. ಈ  ಯೋಜನೆಯ ಪ್ರಸ್ತಾಪಗಳ ಸ್ಪಷ್ಟ ವಿಶ್ಲೇಷಣೆಯನ್ನು ಹೊಂದಿರಬೇಕು.  ಪ್ರಸ್ತಾಪಿಸಲಾದ ವಿವಿಧ ಪರ್ಯಾಯಗಳ ಸಾಧಕ-ಬಾಧಕಗಳು,  ಹಣಕಾಸು ಇಲಾಖೆಯ ಒಪ್ಪಿಗೆ ಅಗತ್ಯವಿರುವ ಸಮಸ್ಯೆಗಳು ಪ್ರಸ್ತಾವಿತ ಪ್ರತಿಯೊಂದು ಆಯ್ಕೆಗಳ ಬಗ್ಗೆ ಆಡಳಿತಾತ್ಮಕವಾಗಿ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿತ್ತು.

 

 

 

ಈ ಪತ್ರ ಇಲಾಖೆಗೆ ತಲುಪಿದ ಮೂರೇ ಮೂರು ದಿನದಲ್ಲಿ ಸಚಿವ ಸಂಪುಟದ ಮುಂದಿಟ್ಟು 2,560 ಎಕರೆಯನ್ನು ಒತ್ತೆ ಇರಿಸಿತ್ತು.

 

ಈ ಯೋಜನೆಯ ಪ್ರಸ್ತಾವನೆಯು ಕಳೆದ 2 ದಶಕಗಳಿಂದಲೂ ಚರ್ಚೆಯಲ್ಲಿದೆಯಾದರೂ ಇದುವರೆಗೂ ಕಾರ್ಯಗತಗೊಂಡಿಲ್ಲ. ಈ ಯೋಜನೆಗೆ ಶೇ.25ರಷ್ಟು ಅಂದರೇ 7,000 ಕೋಟಿಗಳನ್ನು ಒದಗಿಸುವಷ್ಟರ ಮಟ್ಟಿಗೆ ಬಿಡಿಎನಲ್ಲಿ ಆರ್ಥಿಕ ಸಂಪನ್ಮೂಲವಿಲ್ಲ. ಈ ಸಂಬಂಧ 2024ರ ಆಗಸ್ಟ್‌ 16ರಂದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಯೋಜನೆಗೆ ಅವಶ್ಯಕವಿರುವ 2,560 ಎಕರೆ ವಿಸ್ತೀರ್ಣದ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಬೇಕಿದೆ. ಪರಿಹಾರ ರೂಪದಲ್ಲಿ 27,000 ಕೋಟಿ ರು. ವೆಚ್ಚ ಮಾಡಬೇಕಿದೆ. ಇಷ್ಟೊಂದು ಅಗಾಧ ಪ್ರಮಾಣದ ಮೊತ್ತವನ್ನು ಭರಿಸಲು ಸದ್ಯದ ಅರ್ಥಿಕ ಪರಿಸ್ಥಿತಿಯಲ್ಲಿ ಆಗದು ಎಂದು ಬಿಡಿಎ ಕೈಚೆಲ್ಲಿತ್ತು ಎಂಬುದು  ಪತ್ರದಿಂದ ಗೊತ್ತಾಗಿದೆ.

 

 

ಈ ಯೋಜನೆಯನ್ನು ಜಾರಿಗೊಳಿಸಲೇಬೇಕಾದಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನನ್ನೇ ಸಾಲ ನೀಡುವ ಹಣಕಾಸು ಸಂಸ್ಥೆಗೆ ಒತ್ತೆ ಇರಿಸಬೇಕಾಗುತ್ತದೆ ಎಂದೂ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆ ಕಾಮಗಾರಿ ನಡೆಸಲು ಬಿಡಿಎಯು ಸರ್ಕಾರದ ಮುಂದೆ 2 ಆಯ್ಕೆಗಳನ್ನು ಇರಿಸಿದೆ.

 

ಆಯ್ಕೆ-1ರಲ್ಲೇನಿದೆ?

 

ಯೋಜನೆಗೆ ಅವಶ್ಯಕವಿರುವ 2,560 ಎಕರೆ 26.75 ಗುಂಟೆ ಪ್ರದೇಶದ ಭೂ ಸ್ವಾಧೀನಕ್ಕೆ 21,000 ಕೋಟಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ 6,000 ಕೋಟಿ ರು ಸೇರಿ ಒಟ್ಟಾರೆ 27,000 ಕೋಟಿ ರು. ವೆಚ್ಚವಾಗಲಿದೆ. ಈ ಅಂದಾಜು ಮೊತ್ತವನ್ನು ರಾಜ್ಯ ಸರ್ಕಾರವು ಅನುದಾನದ ರೂಪದಲ್ಲಿ ಒದಗಿಸಬೇಕು. ಹಾಗೂ ರಸ್ತೆ ನಿರ್ವಹಣೆ ಕಾಮಗಾರಿಯನ್ನು ಬಿಡಿಎಯು ಭರಿಸಿ ಕಾರ್ಯಗತಗೊಳಿಸಬೇಕು ಎಂದು ಮೊದಲ ಅಯ್ಕೆಯನ್ನು ಮುಂದಿಟ್ಟಿರುವುದು ಗೊತ್ತಾಗಿದೆ.

 

 

ಆಯ್ಕೆ-2ರಲ್ಲೇನಿದೆ?

 

ಯೋಜನೆಗೆ ಅವಶ್ಯಕವಿರುವ 2,560 ಎಕರೆ ಪ್ರದೇಶ ಭೂ ಸ್ವಾಧೀನ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ತಗಲುವ ಅಂದಾಜು 27,000 ಕೋಟಿ ರು ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸು ಸಂಸ್ಥೆಯಿಂದ ಅಥವಾ ಸರ್ಕಾರಿ ಬ್ಯಾಂಕ್‌ ಇನ್ನಿತರೆ ಆರ್ಥಿಕ ಸಂಸ್ಥೆಗಳಿಂದ ಸಾಲದ ರೂಪವಾಗಿ ಹಣಕಾಸು ನೆರವು ಪಡೆಯಬಹುದು ಎಂದು ವಿವರಿಸಿದೆ.

 

ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ಯೋಜನಾ ಮೊತ್ತದ ಶೇ. 75ರಷ್ಟು ಮಾತ್ರ ಮಂಜೂರು ಮಾಡಲಿದೆ. ಉಳಿದ ಶೇ. 25ರಷ್ಟು ಮೊತ್ತವನ್ನು ಭರಿಸಲು ಪ್ರಾಧಿಕಾರದಲ್ಲಿ ಸಂಪನ್ಮೂಲ ಕೊರತೆ ಇದೆ. ಹೀಗಾಗಿ ಪ್ರಾಧಿಕಾರಕ್ಕೆ ಸರ್ಕಾರವೇ ಅನುದಾನ ನೀಡಬೇಕು. ಹಣಕಾಸು ಸಂಸ್ಥೆಗಳಿಗೆ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದಿಂದ ಗ್ಯಾರಂಟಿ ನೀಡಬೇಕು.

 

ಸಾಲದ ಬಡ್ಡಿ ಮೊತ್ತಕ್ಕೆ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಅಳವಡಿಸಿ ಬಡ್ಡಿ ಪಾವತಿಸಲು ಅವಕಾಶ ಕಲ್ಪಿಸಬೇಕು. ಅದೇ ರೀತಿ ರಸ್ತೆ ನಿರ್ವಹಣೆ ಕಾಮಗಾರಿಯನ್ನು ಬಿಡಿಎ ಭರಿಸಿ ಕಾರ್ಯಗತಗೊಳಿಸಬೇಕು ಎಂದು ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

 

 

 

ಈ ಸಂಬಂಧ ಬಿಡಿಎಯು ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪೋರೇಷನ್‌ ಲಿಮಿಟೆಡ್‌ ಹಾಗೂ ಹುಡ್ಕೋ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದೆ.

 

ಈ ಚರ್ಚೆ ಸಮಯದಲ್ಲಿ ‘ ಯೋಜನಾ ವೆಚ್ಚದ ಶೇ.75ರಷ್ಟು ಮೊತ್ತವನ್ನು ಮಾತ್ರ ಸಾಲದ ರೂಪದಲ್ಲಿ ಒದಗಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಉಳಿಕೆ ಶೇ.25ರಷ್ಟನ್ನು ಅಂದರೆ ಅಂದಾಜು 7,000 ಕೋಟಿ ರು.ಗಳನ್ನು ಪ್ರಾಧಿಕಾರವು ಸ್ವಂತ ಬಂಡವಾಳದಿಂದ ಒದಗಿಸಬೇಕು. ಆದರೆ ಶೇ. 25ರಷ್ಟು ಬಂಡವಾಳವನ್ನು ಅಂದರೆ 7,000 ಕೋಟಿ ಒದಗಿಸಲು ಪ್ರಾಧಿಕಾರದಲ್ಲಿ ಯಾವುದೇ ಅರ್ಥಿಕ ಸಂಪನ್ಮೂಲವಿಲ್ಲ. ಆದ್ದರಿಂದ 7,000 ಕೋಟಿ ರು.ಗಳ ಬಂಡವಾಳವನ್ನು ಸರ್ಕಾರದಿಂದಲೇ ಅನುದಾನ ಒದಗಿಸಬೇಕು,’ ಎಂದು ಕೋರಿರುವುದು ಗೊತ್ತಾಗಿದೆ.

 

ಅದೇ ರೀತಿ ಈ ಯೋಜನೆಗಾಗಿ ಪ್ರಾಧಿಕಾರವು ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ಸಾಲ ನೀಡುವ ಹಣಕಾಸು ಸಂಸ್ಥೆಗೆ ಒತ್ತೆ ಇಡಬೇಕಾಗುತ್ತದೆ. ಹೀಗೆ ಒತ್ತೆ ಇಡಬೇಕಾಗಿರುವ ಪ್ರಕ್ರಿಯೆಗೆ ವಿಧಿಸುವ ಮುದ್ರಾಂಕ ಶುಲ್ಕಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಈ ಯೋಜನೆಗೆ ಭೂ ಸ್ವಾಧೀನಕ್ಕೊಳಪಡಿಸುವ ಜಮೀನಿನ ಭೂ ಮಾಲೀಕರು ಹೆಚ್ಚಿನ ಪರಿಹಾರ ನೀಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇರಿಸಿದ್ದಾರೆ. ಭೂ ಸ್ವಾಧೀನ ಕಾಯ್ದೆಯಡಿ ಲಭ್ಯವಾಗುವ ಪರಿಹಾರಕ್ಕೆ ಮೊತ್ತಕ್ಕೆ ಸಾಮ್ಯವಿರುವಂತೆ ಹೆಚ್ಚಿನ ಪರಿಹಾರ ನೀಡಲು ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಈ ಹಿಂದೆಯೇ ಭರವಸೆ ನೀಡಿದ್ದರು.

 

ಪ್ರಸ್ತುತ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಹೆದ್ದಾರಿ ಮತ್ತು ನೈಸ್‌ ರಸ್ತೆಗಳು ಆರು ಪಥದ ರಸ್ತೆಗಳಾಗಿವೆ. ಈ ಯೋಜನೆಯಡಿ ಮೂಲ ಮುಖ್ಯ ಕ್ಯಾರೇಜ್‌ ವೇ ನಲ್ಲಿ ಕಡಿತಗೊಳಿಸದೇ 8 ಪಥಗಳ ರಸ್ತೆ (73.04 ಕಿ ಮೀ ಉದ್ದ) ಮತ್ತು ರಸ್ತೆಯ ಒಂದು ಬದಿಗೆ ಸೇವಾ ರಸ್ತೆ ಒಳಗೊಂಡಂತೆ ರಸ್ತೆ ಅಗಲವನ್ನು 50.0 ಮೀ ಗೆ ಸೀಮಿತಗೊಳಿಸಬೇಕು. ಇದಕ್ಕೆ ನಿಯಂತ್ರಿತ ಪ್ರವೇಶ ಅಂದರೆ ಟೋಲ್‌ ರಸ್ತೆ ನಿರ್ಮಾಣ ಮಾಡಬೇಕು ಎಂದು ಬಿಡಿಎ ಪತ್ರದಲ್ಲಿ ವಿವರಿಸಿದೆ.

 

ಅದೇ ರೀತಿ ರಸ್ತೆಯ ಒಂದು ಬದಿಯಲ್ಲಿ 50.0 ಮೀ ಅಗಲದ ಪ್ರದೇಶವನ್ನು ಭವಿಷ್ಯದಲ್ಲಿ ವಾಣಿಜ್ಯ, ವಸತಿ, ವಸತಿಯೇತರ ವಲಯವಾಗಿ ಅಭಿವೃದ್ಧಿ ಪಡಸಬಹುದು ಮತ್ತು ಎಫ್‌ಎಆರ್‌ ಮತ್ತು ಸೆಟ್‌ ಬ್ಯಾಕ್‌ಗಳಲ್ಲಿ ರಿಯಾಯಿತಿ ನೀಡಿ ಅಭಿವೃದ್ಧಿಗೆ ಉತ್ತೇಜನ ನೀಡಬೇಕು ಎಂದೂ ಕೇಳಿದೆ.

 

ಭೂ ಮಾಲೀಕರಿಗೆ ಪರಿಹಾರಾತ್ಮಕವಾಗಿ ಹೊಸ ಭೂ ಸ್ವಾಧೀನ ಕಾಯ್ದೆ ಅಡಿ ಲಭ್ಯವಾಗುವ ಪರಿಹಾರ ಮೊತ್ತಕ್ಕೆ ಸಾಮ್ಯವಾಗುವಂತೆ ಹೆಚ್ಚಿನ ಪರಿಹಾರ ನೀಡುವುದು ಮತ್ತು ಯೋಜನೆ ವೆಚ್ಚವನ್ನು ಕಡಿಮೆಗೊಳಿಸಬೇಕು. ಈ ನಿಟ್ಟಿನಲ್ಲಿ ಭೂ ಮಾಲೀಕರು ಸ್ವ ಇಚ್ಛೆಯಿಂದ ಭೂ ಪರಿಹಾರವನ್ನು ಟಿಡಿಆರ್‌ ರೂಪದಲ್ಲಿ ಬಯಸಿದಲ್ಲಿ ನೀಡಬಹುದು ಎಂದು ಬಿಡಿಎಯು ಪತ್ರದಲ್ಲಿ ಸಲಹೆ ನೀಡಿರುವುದು ಗೊತ್ತಾಗಿದೆ.

Tags: AuthorityBDAbengalurubusinessCabinetcorridorD K ShivakumarDevelopmentFefiferralFinanceh d kumarswamyiasOpinionProjectResourcesRingRoadSiddaramaiahaUrbanಅಡಮಾನಅನುಮೋದನೆಅಭಿವೃದ್ದಿಅಭಿವೃದ್ಧಿ ಪ್ರಾಧಿಕಾರಆಯುಕ್ತರುಒತ್ತೆಕಾರಿಡಾರ್‍‌ಕ್ರೋಢೀಕರಣಡಿ ಕೆ ಶಿವಕುಮಾರ್ಪ್ರಸ್ತಾವನೆಪ್ರಾಧಿಕಾರಬಿಡಿಎಬಿಸಿನೆಸ್‌ಬೆಂಗಳೂರುಸಚಿವ ಸಂಪುಟಸಚಿವ ಸಂಪುಟ ಉಪ ಸಮಿತಿಸಂಪನ್ಮೂಲಸಾಲಸಿದ್ದರಾಮಯ್ಯಹುಡ್ಕೋಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಬಹುಕೋಟಿ ಅಕ್ರಮ, ನಿಯಮಗಳ ಉಲ್ಲಂಘನೆ ಆರೋಪ; ರಿಜಿಸ್ಟ್ರಾರ್‌, ಹಣಕಾಸು ಅಧಿಕಾರಿ ನಡುವೆ ಶೀತಲಸಮರ

Next Post

ಗದಗ ಬೆಟಗೇರಿ ಪ್ರಾಧಿಕಾರ ವಿಧೇಯಕ; ಅಧಿಕಾರ ಮೊಟಕು, ಪ್ರಜಾಪ್ರಭುತ್ವ ದುರ್ಬಲ, ರಾಜ್ಯಪಾಲರ ಆತಂಕ

thefilestack

thefilestack

Next Post

ಗದಗ ಬೆಟಗೇರಿ ಪ್ರಾಧಿಕಾರ ವಿಧೇಯಕ; ಅಧಿಕಾರ ಮೊಟಕು, ಪ್ರಜಾಪ್ರಭುತ್ವ ದುರ್ಬಲ, ರಾಜ್ಯಪಾಲರ ಆತಂಕ

Recommended

ಮುಸ್ಲಿಮರು: ಭರತ ಭೂಮಿಯ ಮಲತಾಯಿ ಮಕ್ಕಳು!

4 years ago

ಹೊರರಾಜ್ಯದ ಅಕ್ಬರ್‌ ಎಂಬಾತನಿಂದ ರಾಜ್ಯದ ಸರ್ಕಾರಿ ವಾಹನ ಬಳಕೆ; ಬಹಿರಂಗವಾಗದ ಪರಿಶೀಲನಾ ವರದಿ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd